ಉರಿಲಿಂಗ ಪೆದ್ದಿ
ಸು. 1180. ಉರಿಲಿಂಗ ದೇವನ (ನೋಡಿ- ಉರಿಲಿಂಗ-ದೇವ) ಶಿಷ್ಯ. ಆಂಧ್ರ ಪ್ರದೇಶದವ. ಪೂರ್ವಾಶ್ರಮದಲ್ಲಿ ಪೆದ್ದಣ್ಣನೆಂಬ ಹೆಸರು ಹೊಂದಿದ್ದು ಕುಪ್ರಸಿದ್ಧ ಕಳ್ಳನಾಗಿದ್ದ. ಉರಿಲಿಂಗದೇವ ನಂದವಾಡದ ಸೂರಯ್ಯನಿಗೆ ವೀರಶೈವೋಪದೇಶ ಕೊಡುತ್ತಿರುವಾಗ ಕಳ್ಳತನಕ್ಕಾಗಿ ಅದೇ ಮನೆಗೆ ಹೋಗಿದ್ದ ಪೆದ್ದಣ್ಣ ಕುತೂಹಲದಿಂದ ದೀಕ್ಷಾಕಾರ್ಯವನ್ನು ನೋಡಿ ಮನಃಪರಿವರ್ತನೆಗೊಂಡನಂತೆ. ಅಂದಿನಿಂದ ಹನ್ನೆರಡು ವರ್ಷಕಾಲ ಉರಿಲಿಂಗದೇವನ ಮಠಕ್ಕೆ ಯಾರಿಗೂ ತಿಳಿಯದಂತೆ ಸೌದೆ ತಂದು ಹಾಕುತ್ತಿದ್ದನಂತೆ. ಒಮ್ಮೆ ಉರಿಲಿಂಗದೇವನಿಗೆ ಸಿಕ್ಕಿಬಿದ್ದು ಉರುವಲಿನ ಬೆಲೆ ತೆಗೆದುಕೋ ಎಂದು ಒತ್ತಾಯಪಡಿಸಿದಾಗ ಸೂರಯ್ಯನಿಗೆ ಕೊಟ್ಟಂಥ ದೀಕ್ಷೆಯನ್ನು ನನಗೂ ಕೊಡಿ - ಎಂದು ಬೇಡಿದನಂತೆ. ಅಂದಿನಿಂದ ಗುರು ಹೋದ ಬಂದ ಕಡೆಯಲ್ಲೆಲ್ಲಾ ದೀಕ್ಷೆಗಾಗಿ ಕಾಡತೊಡಗಿದಾಗ ಗುರುವಿಗೆ ಬೇಸರವಾಗಿ ಘೇದಗಡಿ ಜಾ ಜಾದಗಡಿ ಜೆ. ತೆಗೆದುಕೋ ಈ ಕಲ್ಲನ್ನು, ಹೊರಟು ಹೋಗು -ಎಂದು ಹೇಳಿ ಒಂದು ಕಲ್ಲು ತೆಗೆದು ಎಸೆದನಂತೆ. ಪೆದ್ದಣ್ಣನ ಶುದ್ಧ ಭಕ್ತಿಯಿಂದ ಕಲ್ಲು ಲಿಂಗವಾಯಿತು. ಶ್ರದ್ಧೆಯಿಂದ ಮಾತು ಮಂತ್ರವಾಯಿತು. ಅದೇ ಊರಿನ ಅರಸ ನಂದರಾಜ ಕೆರೆಯೊಂದನ್ನು ತೆಗೆಸುತ್ತಿದ್ದು, ಬಂಡೆಸಿಕ್ಕಿ ಅದನ್ನು ತೆಗೆಯದ ಹೊರತು ನೀರು ಬರುವುದಿಲ್ಲವೆಂದು ತಿಳಿದು ಉರಿಲಿಂಗದೇವನಿಗೆ ಶರಣಾದ. ಗುರುವಿನ ಅಪ್ಪಣೆಯಂತೆ ಪೆದ್ದಣ್ಣ ಆ ಬಂಡೆಯನ್ನು ಒಡೆದನೆಂದೂ ಅವನ ಇಷ್ಟಲಿಂಗವೇ ಆ ಬಂಡೆಯನ್ನು ಸೀಳಿತೆಂದೂ ಪ್ರತೀತಿ. ಶಿಷ್ಯನ ನಿಷ್ಠಾಭಕ್ತಿಯನ್ನು ಕಂಡು ಗುರು ಆತನಿಗೆ ಲಿಂಗದೀಕ್ಷೆ ಕೊಟ್ಟು ಉರಿಲಿಂಗ ಪೆದ್ದಿಯೆಂದು ನಾಮಕರಣ ಮಾಡಿ, ಮುಂದೆ ಆತನನ್ನೇ ತನ್ನ ಪೀಠಕ್ಕೆ ಕುಳ್ಳಿರಿಸಿದ. ಈ ಕಥೆ ಅದೃಶ್ಯ ಕವಿಯ ಪ್ರೌಢದೇವರಾಯನ ಕಾವ್ಯ, ಬಸವಕವಿಯ ಮಹಾಲಿಂಗಲೀಲೆಗಳಲ್ಲಿ ಸೂಚಿತವಾಗಿದೆ. ಪೆದ್ದಿ ಗೃಹಸ್ಥ. ಈತನ ಸತಿ ಪ್ರಸಿದ್ಧ ಶರಣೆ ಹಾಗೂ ವಚನಕಾರ್ತಿಯಾದ ಕಾಳವ್ವೆ. ಈತನ ವಚನಗಳಿಂದ ಈತ ಮಹಾವಿದ್ವಾಂಸನೂ ಹಲವಾರು ಶಾಸ್ತ್ರಪಾಂಡಿತ್ಯವುಳ್ಳವನೂ ವೇದಾವಿದ್ಯಾವೈದುಷ್ಯ ಪ್ರಪೂರ್ಣನೂ ಶಿವಾನುಭವ ಚರ್ಯಾಕಾಂಡ ಪಂಡಿತನೂ ಆಗಿದ್ದುದು ಕಂಡು ಬರುತ್ತದೆ. ಕೆಲವು ವಚನಗಳು 2-3 ಪುಟಗಳಷ್ಟು ದೀರ್ಘವಾಗಿದ್ದು ವೇದ, ಶಾಸ್ತ್ರ, ಪುರಾಣ, ಆಗಮ, ಉಪನಿಷತ್ ಮೊದಲಾದ ಧರ್ಮಗ್ರಂಥಗಳ ಪ್ರಮಾಣವಾಕ್ಯ ಭೂಯಿಷ್ಠವಾಗಿವೆ. ಇವನದು ಜ್ಞಾನೋಪಾಸನೆಯ ತೈಜಸ ಜೀವನ. ಇವನ ವಚನಗಳಲ್ಲಿ ಉರಿಲಿಂಗ ಪೆದ್ದ ಪ್ರಿಯ ವಿಶ್ವೇಶ್ವರ ಎಂಬ ಅಂಕಿತವಿದೆ. ವಚನ ರಚನೆಯಲ್ಲಿ ಈತ ಗುರುವನ್ನು ಮೀರಿಸಿದ ಶಿಷ್ಯ. ಲಿಂಗಲೀಲಾವಿಲಾಸಚಾರಿತ್ರ, ಗುಬ್ಬಿಮಲ್ಲಣಾರ್ಯರ ಗಣಭಾಷ್ಯರತ್ನಮಾಲಾ, ಆರ್. ಆರ್. ದಿವಾಕರರ ವಚನ ಶಾಸ್ತ್ರರಹಸ್ಯಗಳಲ್ಲಿ ಈತನ ವಚನಗಳು ಉದ್ಧøತವಾಗಿವೆ. ಪಾಲ್ಕುರಿಕೆಯ ಸೋಮನಾಥನ (ಸು.1195) ಸಹಸ್ರಗಣನಾಮದಲ್ಲಿ 350 ಅಮರಣಗಳಲ್ಲಿ ಬಸವ, ಚನ್ನಬಸವರ ಹೆಸರುಗಳ ಜೊತೆ ಉರಿಲಿಂಗ ಪೆದ್ದಿಯ ಹೆಸರಿದೆ. ಫ. ಗು. ಹಳಕಟ್ಟಿಯವರು ಈತನ 149 ವಚನಗಳನ್ನು ಸಂಗ್ರಹಿಸಿದ್ದಾರೆ (1936). ತನ್ನ ಗುರುವಿನ ಮರಣದಿಂದ ಬೇಸರಹೊಂದಿದ ಪೆದ್ದಿ ಕಲ್ಯಾಣ ಪಟ್ಟಣಕ್ಕೆ ಬಂದು ತನ್ನ ಕೊನೆಯ ದಿನಗಳನ್ನು ಅಲ್ಲೇ ಕಳೆದಂತೆ ಕಾಣುತ್ತದೆ. ಅಲ್ಲಿ ಇವನದೊಂದು ಮಠವೂ ಸಮಾಧಿಯೂ ಇದೆಯೆಂದು ಹೇಳುತ್ತಾರೆ. ಕಲ್ಯಾಣ ಸೇಡಮದ ಹತ್ತಿರದ ಕೊರಳಿ, ಬೇವಿನ ಚಿಂಚೋಳಿ ಮತ್ತು ಭಾಲ್ಕಿಗಳಲ್ಲಿ ಇಂದಿಗೂ ಉರಿಲಿಂಗ ಪೆದ್ದಿಗಳ ಮಠಗಳಿವೆಯೆಂದೂ ಅವೆಲ್ಲಕ್ಕೂ ಹರಿಜನರೇ ಭಕ್ತರೆಂದೂ ಮಠಾಧಿಕಾರಿಗಳು ಮಾತ್ರ ಲಿಂಗಾಂಗಿಗಳೆಂದೂ ತಿಳಿಯುತ್ತದೆ. ಅಸ್ಪøಶ್ಯ ಆಚಾರ್ಯನಾದದ್ದು. ಮಠಾಧಿಕಾರಿಯಾದದ್ದು ಭಾರತದ ಇತಿಹಾಸದಲ್ಲೇ ಒಂದು ಕ್ರಾಂತಿಕಾರಕ ಘಟನೆ.									

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ